Monday, June 6, 2011

ಮರೆವು......

          ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು ಬಿಸಿ ಬಿಸಿಯಾಗಿ ತಿನ್ನುವುದು ರೂಢಿಯಾಗಿಬಿಟ್ಟಿದೆ.  ಒಂದು ಕಡೆ ವಾತಾವರಣ ಬದಲಾದರೆ ಇನ್ನೊಂದು ಕಡೆ ತಿನ್ನುವ ಆಹಾರ ಪದಾರ್ಥಗಳಲ್ಲೂ ಬದಲಾವಣೆ.... ಪರಿಣಾಮ ...... ಅನಾರೋಗ್ಯ ಎಂದು ಎಲ್ಲರಿಗೂ ಗೊತ್ತು. 
          
          ಇಂದು ಒಂದೇ ಸಮನೆ ಎಡೆ ಬಿಡದೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಿರುವಾಗ ಮೇಲೆ ಹೇಳಿದ ತಿಂಡಿಗಳು ನೆನಪಿಗೆ ಬಂದು ಬಾಯಲ್ಲಿ ನೀರು ಬಂತು.... ಪತ್ರಡೆ ನೆನಪಾದೊಡನೆ ನಮ್ಮೂರಲ್ಲಿ ನೆಡೆದ ಒಂದು ಘಟನೆಯೂ ನೆನಪಾಯಿತು.  ಸ್ವಾರಸ್ಯಕರವಾಗಿರುವುದರಿಂದ ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಬರೆಯುತ್ತಿದ್ದೇನೆ.

          ಸಾಧಾರಣ ಹತ್ತು ಹನ್ನೆರಡು ವರ್ಷಗಳ ಕೆಳಗೆ ನಡೆದ ಘಟನೆ ಇದು......  ಮಳೆಗಾಲದಲ್ಲಿ ನಮ್ಮೂರಿನ ಕೂಲಿ ಕೆಲಸಗಾರನೊಬ್ಬನಿಗೆ ಅನಾರೋಗ್ಯ ಉಂಟಾಯಿತು.  ಒಂದೆರಡು ದಿನ ಮನೆ ಮದ್ದು, ಕಷಾಯ ಇತ್ಯಾದಿಗಳನ್ನು ತೆಗೆದುಕೊಂರೂ ಕಡಿಮೆಯಾಗದಿದ್ದಾಗ ಆತ ವೈದ್ಯರ ಬಳಿಗೆ ಹೋದ.  ಒಂದೇ ಊರಿನವರಾದ ವೈದ್ಯರಿಗೂ ಕೂಲಿಯವನಿಗೂ ಪರಸ್ಪರ ಪರಿಚಯ ವಿದ್ದಿದ್ದರಿಂದ ಕುಶಲ ಪ್ರಶ್ನೆಗಳನ್ನು ಮಾಡಿದ ಬಳಿಕ ಏನಾಗಿದೆ ಎಂದು  ಕೇಳಿದರು...  ಕೂಲಿಯವನು ತನ್ನ ರೋಗವನ್ನು ಹೇಳಿಕೊಂಡ ಬಳಿಕ ವೈದ್ಯರು ಅವನಿಗೆ ಇನ್ನೆರಡು ದಿನದಲ್ಲಿ ಮಲ ಪರೀಕ್ಷೆಯಾಗಬೇಕೆಂದೂ ಪರೀಕ್ಷೆಗಾಗಿ  ಮಲವನ್ನು ತರಬೇಕೆಂದು ಹೇಳಿದರು.  ನಂತರ ಕೂಲಿಯವನು ಹೊರಡುವಾಗ ವೈದ್ಯರು ಅವನನ್ನು ಕರೆದು ಎಲ್ಲಾದರೂ ಸ್ವಲ್ಪ ಪತ್ರಡೆ ಸಪ್ಪು (ಮರಗೆಸು) ಸಿಕ್ಕಿದರೆ ತೆಗೆದುಕೊಂಡುಬಾ ಪತ್ರಡೆ ತಿನ್ನದೇ ಬಹಳ ವರ್ಷಗಳಾದವು ಎಂದರು.  ಆಯ್ತು ಡಾಕ್ಟ್ರೇ ಎಂದು ಹೋದವನು ಎರಡು ದಿನಗಳ ನಂತರ ಒಂದು ಕಾಯಿಸಿದ ಬಾಳೆಯಲೆಯಲ್ಲಿ ಮಲವನ್ನು ಪಟ್ಟಣ ಕಟ್ಟಿಕೊಂಡು ವೈದ್ಯರ ಬಳಿಗೆ ಬಂದನು.  ಇವನು ರೋಗಿ ಎನ್ನುವುದು ವೈದ್ಯರಿಗೆ ಮರೆತು ಹೋಗಿ ಪತ್ರಡೆ ಸೊಪ್ಪಿನ ನೆನಪು ಮಾತ್ರ ಉಳಿದಿತ್ತು.  ಚೀಲದಿಂದ ಮಲದ ಪಟ್ಟಣವನ್ನು ತೆಗೆಯಲು ಹೊರಟ ಅವನನ್ನು ವೈದ್ಯರು ತಡೆದು (ಪತ್ರಡೆ ಸೊಪ್ಪು ತೆಗೆಯುತ್ತಿರಬಹುದೆಂದು ಭಾವಿಸಿ) ಇಲ್ಲಿ ಕೊಡಬೇಡ ಮನೆಗೆ ಹೋಗಿ ನನ್ನ ಹೆಂಡತಿಯ ಹತ್ತಿರ ಕೊಟ್ಟುಹೋಗು ಅಂದರು.   ಕೂಲಿಯವನು ವೈದ್ಯರು ಮಲವನ್ನು ಮನೆಯಲ್ಲಿ ಪರೀಕ್ಷೆ ಮಾಡಬಹುದೆಂದು ಭಾವಿಸಿ ಅವರ ಮನೆಗೆ ಹೋಗಿ ವೈದ್ಯರ ಹೆಂಡತಿಯ ಹತ್ತಿರ "ಡಾಕ್ಟ್ರು ಇದನ್ನ ನಿಮ್ಗೆ ಕೊಡಕ್ಕೆ ಹೇಳಿದಾರೆ" ಅಂತ ಕೊಟ್ಟು ಹೋದನು.  ಸರಿ ಎಂದು ಅದನ್ನು ತೆಗೆದುಕೊಂಡಾಕೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದಳು......... ಪಟ್ಟಣವನ್ನು ಬಿಚ್ಚಿ ನೋಡಿದಾಗ.........  

          ಮುಂದೆ ವೈದ್ಯರ ಪರಿಸ್ಥಿತಿ ಏನಾಗಿರಬಹುದೆಂದು ನೀವೇ ಊಹಿಸಿ.....   :)

15 comments:

  1. ಹೊಟ್ಟೆ ತುಂಬಾ ನಗದೆ ಬಹಳ ದಿನಗಳಾಗಿತ್ತು...

    ಗುರುಗಳೆ.. ನಗು ತಡೆಯಲಿಕ್ಕಾಗ್ತ ಇಲ್ಲ...!!

    ಹ್ಹೆ ಹ್ಹೆ !! ಹ್ಹೊ.. ಹ್ಹೋ.. !

    ReplyDelete
  2. ಹ್ಹ ಹ್ಹ ಹ್ಹ ಡಾಕ್ಟರ್ಗೇ ಔಷ್ದಿ ಬೇಕಿತ್ತ್!

    ReplyDelete
  3. ನಕ್ಕು ನಕ್ಕು ಸಾಕಾಗಿ ಹೋಯಿತು ಸ್ವಾಮಿ !!!

    ReplyDelete
  4. ಶಿವನೇ ಶಂಬುಲಿಂಗ .. ಡಾಕ್ಟರ್ ಗತೀ ....ಆ ದೇವರಿಗೆ ಪ್ರೇತಿ... :)

    ReplyDelete
  5. ಮೈಸೂರಿನ ಕಡೆ ವೈದ್ಯರೊಬ್ಬರಿಗೆ ಬೀದರ್ ನ ಹಳ್ಳಿಯೊಂದಕ್ಕೆ ವರ್ಗವಾಯಿತು.ಉರ್ದು ಮಾತನಾಡುವ ರೋಗಿಯೊಬ್ಬ ಪರೀಕ್ಷೆಗಾಗಿ ಡಬ್ಬಿಯೊಂದರಲ್ಲಿ ಮಲ ತಂದಿದ್ದ.'ಘೂ'ಲಾಯಾ ಸಾಬ್ ಅಂದ(ಉರ್ದುವಿನಲ್ಲಿ ಘೂ ಎಂದರೆ ಮಲ).ಅವನು 'ಘೂ' ಅಂದದ್ದು ಡಾಕ್ಟರಿಗೆ 'ಘೀ'ಎಂದು ಕೇಳಿಸಿತು.ಹಳ್ಳಿಯವರು ಬೆಣ್ಣೆ ,ತುಪ್ಪ ತಂದುಕೊಡುವುದು ಆಗಿನ ಕಾಲದಲ್ಲಿ ಮಾಮೂಲಾಗಿತ್ತು.ಮಾಮೂಲಿನಂತೆ ಮನೆಯಲ್ಲಿ ಕೊಡುವಂತೆ ಹೇಳಿದರು.ಮುಂದೆ ಆದ ಅನಾಹುತವನ್ನು ಊಹಿಸಿಕೊಳ್ಳಿ.......

    ReplyDelete
  6. ನೆನಪಿಸಿಕೊಂಡು ನೆನಪಿಸಿಕೊಂಡು ನಕ್ಕೆ! ಅದು ಹೊಟ್ಟೆತುಂಬವೋ ಬಾಯ್ತುಂಬವೋ ಮನತುಂಬವೋ ಗೊತ್ತಿಲ್ಲ! ಡಾಕ್ಟರು ’ಘೂ’ ’ಘೀ’ ಅಂದರು. ಅದು ಮತ್ತಷ್ಟು ನಗುವುದಕ್ಕೆ ಕಾರಣವಾಯಿತು. ವೈದ್ಯರುಗಳ ಮನೆಯವರು ಯಾರೇ ಏನನ್ನೇ ಕೊಟ್ಟರೂ ದೂರನಿಂತು ಕೋಲಿನಿಂದ ಬಿಡಿಸಿ ಪರೀಕ್ಷಿಸಿ ಒಳಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಆ ಕಾಲದಲ್ಲಿ ಇತ್ತು. ಇಂದು ಕಾಲ ಬದಲಾಗಿದೆ, ವೈದ್ಯರು ಮಲವನ್ನು ತೆಗೆದುಕೊಂಡು ಲ್ಯಾಬಿಗೆ ಹೋಗಿ ಎಂದು ಚೀಟಿ ಬರೆದುಕೊಡುತ್ತಾರೆ, ಹಾಗಾಗಿ ವೈದ್ಯರುಗಳ ಮನೆಯವರು ಸೇಫು.

    ReplyDelete
  7. ಓಹ್! ಸೂಪರ್ ಸರ್...ಸಕ್ಕತ್ ನಗುಬಂತು..ಅದಲುಬದಲಾದರೇ ಏನಾಗಬಹುದು ಅನ್ನುವುದಕ್ಕೆ ಇದಂತೂ ಉತ್ತಮ ಉದಾಹರಣೆ..

    ReplyDelete
  8. ವೆರಿ ಸ್ಯಾಡ್, ತಮಾಷೆಯೆನೋ ಇದೆ. ಆದರೆ ಈ ಡಾಕ್ಟರು ಹೆಂಡತಿಯ ಮೇಲೆ ಈ ರೀತಿ ದ್ವೇಷ ತೀರಿಸ್ಕೋಬಾರದಿತ್ತು.

    ReplyDelete
  9. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು...... :)

    ReplyDelete
  10. ಹ ಹ .. ಇನ್ನು ಮುಂದೆ ಪತ್ರೋಡೆ ಎಲೆ ತರುವಾಗ ನಿಮ್ಮ ಲೇಖನ ನೆನೆಪು ಆಗುವುದು ಗ್ಯಾರೆಂಟಿ.

    ReplyDelete
  11. ಗುರುಪ್ರಸಾದರೆ, ಸಖತ್ತಾಗಿದೆ ಪತ್ರೊಡೆ ಪ್ರಸ೦ಗ. ನಗೆಯುಕ್ಕಿ ಬ೦ತು.

    ReplyDelete