Thursday, February 25, 2010

ಈ ಚಿತ್ರಗಳ ಬಗ್ಗೆ ನಾನೇನು ಹೇಳಲಿ?

     ಧನುರ್ಮಾಸ, ಬೆಳಿಗ್ಗೆ ವಿಶೇಷ ಪೂಜೆಗೆ ದೇವಸ್ಥಾನಕ್ಕೆ ಹೋಗಬೇಕಿತ್ತು, ಛಳಿ, ಇಬ್ಬನಿ ಎಲ್ಲ ಒಟ್ಟುಗೂಡಿತ್ತು.  ದಿನ ನಿತ್ಯದಂತೆ ಬೆಳಿಗ್ಗೆ 4.30 ಕ್ಕೆ ಮನೆಯಿಂದ ಹೊರಟವನು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಬರುವ ದಾರಿಯಲ್ಲಿ ಪ್ರಕೃತಿಯ ವಿಸ್ಮಯಗಳನ್ನು ನೋಡುತ್ತಾ ಬಂದೆ.  ಆಗ ತಾನೇ ಉದಯಿಸುತ್ತಿರುವ ಸೂರ್ಯ, ಕೊರೆಯುತ್ತಿರುವ ಛಳಿ, ಗಿಡ ಮರಗಳಗಳ ಎಲೆಯ ಮೇಲೆ ಕುಳಿತಿರುವ ಇಬ್ಬನಿ, ತನ್ನ ಆಹಾರದ ಬೇಟೆಗಾಗಿ ಬಲೆಗಳನ್ನು ಹಣೆದು ಕೊಂಡು ಕಾಯುತ್ತಾ ಯಾವುದೋ ಒಂದು ಮೂಲೆಯಲ್ಲಿ ಕುಳಿತಿರುವ ಸಣ್ಣ  ಸಣ್ಣ ಜೇಡರಗಳು, ಅವುಗಳ ಬಲೆಯ  ಮೇಲೆ ಕುಳಿತಿರುವ ಇಬ್ಬನಿ, ಮುಂಜಾನೆಯ ಎಳೆಬಿಸಿಲು, ಝುಳು ಝುಳು ಎಂದು ಸದ್ದು ಮಾಡುತ್ತಾ ತನ್ನ ಇರುವಿಕೆಯನ್ನು ತೋರಿಸುತ್ತಿದ್ದ ತುಂಗಾ ನದಿ, ಆಗತಾನೇ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದೇವೆ ಎಂದು ಕೂಗಿ ಹೇಳುತ್ತಿರುವ ಹಕ್ಕಿಗಳ ಚಿಲಿ ಪಿಲಿ ಕಲರವ, ನನ್ನ ಮನಸ್ಸಿಗೆ ತುಂಬಾ ಕುತೂಹಲವನ್ನು ಸಂತೋಷವನ್ನು ತಂದಿತ್ತು.  ದಾರಿಯಲ್ಲಿ ಬರುವಾಗಲೇ ಒಂದು ತೀರ್ಮಾನಕ್ಕೆ ಬಂದೆ, ಇವತ್ತು ಏನಾದರೂ ಮಾಡಿ ಒಂದು ಒಳ್ಳೆ ಫೋಟೋ ತೆಗೆಯಬೇಕು ಅಂತ.  ಮನಸ್ಸಿಗೆ ಬಂದೊಡನೆ ಓಡೋಡೋಡಿ ಮನೆಗೆ ಬಂದು ನನ್ನ ಕ್ಯಾಮರಾವನ್ನು ಕುತ್ತಿಗೆಗೆ ನೇತುಹಾಕಿಕೊಂಡು ನನ್ನ ಬೇಟೆಯನ್ನು ಪ್ರಾರಂಭ ಮಾಡಿದೆ ಸಾಧಾರಣವಾಗಿ 7 ಗಂಟೆ ಹೊತ್ತಿಗೆ.  ಒಂದೋ ಎರೆಡೋ ಹತ್ತು ಹಲವಾರು ಬಲೆಗಳನ್ನು, ಎಲೆಗಳ ತುದಿಯಲ್ಲಿರುವ ಇಬ್ಬನಿಯ ಬಿಂದುಗಳನ್ನು ಕ್ಲಿಕ್ಕಿಸಿದೆ,


             

  ಆದರೂ ಮನಸ್ಸಿಗೆ ತೃಪ್ತಿಯಾಗಲಿಲ್ಲ,    "ಛೇ ಇವತ್ತು ಒಂದಾದರೂ ಓಳ್ಳೇ ಫೋಟೋ ತೆಗೆಯಬೇಕು ಅಂತ ಹುರುಪಿನಿಂದ ಬಂದರೆ ಹೀಗಾಯಿತಲ್ಲ" ? ಅಂತ ಮನಸ್ಸಿಗೆ ಕಾಣುತ್ತಿತ್ತು.  ಆ ಹೊತ್ತಿಗಾಗಲೇ ಸಮಯ 8:15 ಆಗಿ ಹೋಗಿತ್ತು.  ಸರಿ ಮಠಕ್ಕೆ ತಡವಾಗುತ್ತದೆ ಅಂತ ನನ್ನ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಡೋವಾಗ ನನ್ನ ಕಣ್ಣಿಗೆ ಈ ಜೇಡರ ಬಲೆ ಕಂಡಿತು.  

     ಅಯ್ಯಪ್ಪ!  ಅದ್ಭುತ! ಯಂಥ ಸಹಾಸ ಈ ಜೇಡರದ್ದು!  ಒಂದೇ ದಾರದಲ್ಲಿ ಎಷ್ಟು ಅಲಂಕಾರವಾಗಿ ಹೆಣೆದಿದೆ ಈ ಬಲೆಯನ್ನು!  ನೋಡಿದೊಡನೆ ನನಗೆ ಆದ ಆನಂದ ಅಷ್ಟಿಷ್ಟಲ್ಲ, ಕೂಡಲೇ ಬೇರೆ ಬೇರೆ ಮೋಡ್ ಗಳಲ್ಲಿ, ಸೆಟ್ಟಿಂಗ್ ಗಳಲ್ಲಿ ಇದರ ಚಿತ್ರಗಳನ್ನು ಸೆರೆ ಹಿಡಿದೆ.  ಫಲಿತಾಂಶವೂ ಕೂಡಾ ಮನಸ್ಸಿಗೆ ಸಮಾಧಾನಕರವಾಗಿತ್ತು.  ನಿಶ್ಚಿಂತೆಯಿಂದ ಮನೆಗೆ ಬಂದು ನಂತರ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದೆ.  ಈ ಚಿತ್ರದ ಜೊತೆಗೆ ಕ್ಲಿಕ್ಕಿಸಿದ ಇನ್ನೆರಡು ಚಿತ್ರಗಳು ಇಲ್ಲಿವೆ.
    
"ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" 
ತಾಯಿ ಮತ್ತು ಜನ್ಮ ಭೂಮಿ ಇವೆರಡೂ ಸ್ವರ್ಗಕ್ಕಿಂತ ಹೆಚ್ಚು ಎಂದು ನಮ್ಮ ಹಿರಿಯರು ಹೇಳಿದ್ದಾರೆ.  ನಾವು ಎಲ್ಲಿಯೇ ಇರಲಿ ನಮ್ಮ ತಾಯಿಯನ್ನು ನೋಡಿದೊಡನೆ ಹಾಗೂ ಹುಟ್ಟೂರಿಗೆ ಬಂದೊಡನೆ ಮನಸ್ಸು ಪುಳಕಿತವಾಗುತ್ತದೆ.


ನಿಮ್ಮ , ಗುರುಪ್ರಸಾದ್.,



2 comments:

  1. ಗುರುಪ್ರಸಾದ್ ಸರ್
    ನಿಮ್ಮ ಬರಹ ಬಹಳ ಆಪ್ತವಾಗಿದೆ
    ಅದರಲ್ಲೂ ''ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ"
    ತಾಯಿ ಮತ್ತು ಜನ್ಮ ಭೂಮಿ ಇವೆರಡೂ ಸ್ವರ್ಗಕ್ಕಿಂತ ಹೆಚ್ಚು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಾವು ಎಲ್ಲಿಯೇ ಇರಲಿ ನಮ್ಮ ಹುಟ್ಟೂರಿಗೆ ಬಂದೊಡನೆ ಮನಸ್ಸು ಪುಳಕಿತವಾಗುತ್ತದೆ''
    ಸಾಲುಗಳು ಎಷ್ಟು ಸತ್ಯ ಅಲ್ಲವಾ

    ReplyDelete